Tuesday, July 14, 2015

# ಮರೆಯಾದ ಮಾಂತ್ರಿಕ

# ಮರೆಯಾದ ಮಾಂತ್ರಿಕ 

Mareyaada Mantrika


ಸಂಜೆ ರಾತ್ರಿಗಳು ಸಮ್ಮಿಲನಗೊಂಡು ತಮ್ಮನ್ನು ತಾವೇ ಗುರುತಿಸಿಕೊಳ್ಳಲಾಗದ ಸಮಯ.ಕಳೆದ ಮೂರು ತಾಸುಗಳಿಂದ ಕೇಳುತ್ತಿರುವ ಈ ಚುಕುಬುಕು ಸದ್ದು ಬಹುಷಃ ನನ್ನ ಉತ್ಸಾಹವನ್ನು ಕ್ಷೀಣಿಸಿರಬಹುದು.ಬೇಸರ ಮನದ ಬಾಗಿಲ ತಟ್ಟಲು ಮುಂದಾಗುತ್ತಿದೆ.ಎಂಟು ತಾಸುಗಳ ಹಿಂದೆ ತಾಜಾ ಸುದ್ದಿ ಹೊತ್ತ ಹೂ ಬಾಡಿದೆ.ಪ್ರಯತ್ನದಿಂದ ಅರಳಿಸಿದರೂ ನನ್ನನ್ನು ಆಕರ್ಷಿಸದೇ ಅಣಗಿಸಿ ನಿಂತ ಎಲ್ಲಾ ಮುಸಡಿಗಳಿಗೆ ಗಡ್ಡ ಮೀಸೆ ಬರೆದು ಮುಗುಳ್ನಗಲೂ ಅವಕಾಶ ಕಸಿದ ಪತ್ರಿಕೆಯು ಲೇಖನಿಯ ಉತ್ಸಾಹವನ್ನು ಹೀರಿ ಬರಿದು ಮಾಡಿತ್ತು.ತಂಗಾಳಿಯು ನನ್ನನ್ನು ಚುಂಬಿಸಲೆಂದು ರೈಲಿನ ಬಾಗಿಲಿನ ಹತ್ತಿರ ಬಂದು ನಿಂತೆ.ಯಾರೋ ಕರೆದಂತಾಗಿ ಹಿಂದೆ ತಿರುಗಿದರೆ, ಸಣಕಲು ದೇಹದ ಭಿಕ್ಷುಕ.ಮತ್ತೆ ನನ್ನ ದೃಷ್ಟಿ ಗಗನದೆಡೆಗೆ ನೆಗೆದು ಹುಣ್ಣಿಮೆ ಚಂದ್ರನನ್ನು ನಾಟಿತು.ಕಣ್ಣಲ್ಲಿ ಚಂದ್ರನ ಬಿಂಬ ಮೂಡುವಷ್ಟರಲ್ಲಿ ಏನೋ ಹೊಳೆಯಿತು, ತಕ್ಷಣ ಹಿಂದೆ ತಿರುಗಿ ಆ ಭಿಕ್ಷುಕನನ್ನು ದಿಟ್ಟಿಸಿದೆ.



ಅರೇ!ಇವನು ಅದೇ ಗಾರುಡಿಗ, ಪ್ರಚಂಡ ಮಾಂತ್ರಿಕ. ಹತ್ತು ವರ್ಷಗಳ ಹಿಂದೆ ಪ್ರತಿ ಸಂತೆಯ ವಾರದ ನನ್ನ ಶಾಲಾ ದಿನಗಳನ್ನು ತಿಂದ ಮಾಯಾವಿ, ಹಾಜರಾತಿ ಇಲ್ಲದೇ ತನ್ನ ಸಂತೆ ಕ್ಲಾಸಿನಲ್ಲಿ ನನ್ನನ್ನು ಕಟ್ಟಿಹಾಕಿದ ಮೋಡಿಗಾರ, ಉತ್ಸಾಹಕ್ಕೆ ನವಚೈತನ್ಯ ತುಂಬುವಂತಹ ಇವನ ಹಾವಬಾವ, ಸಂತೆಯಲ್ಲಿ ಕೊಳ್ಳಬೇಕಾದ ಸಾಮಗ್ರಿಗಳ ನೆನಪನ್ನು ಕೊಂದು ತನ್ನ ಆಟದ ಕಡೆಗೆ ಜನರನ್ನು ವಶೀಕರಿಸಿಕೊಳ್ಳುತ್ತಿದ್ದ ಜಾದೂಗಾರ, ಜಾದೂವಿನ ಮೇಲೆ ಜಾದೂ ತೋರಿಸಿ ಎಲ್ಲಿಯೂ ಬೇಸರ ಇಣುಕದಂತೆ ಜನರನ್ನು ನಗಿಸಿ, ಹೆದರಿಸಿ ಸಂಜೆಹೊತ್ತಿಗೆ ಚಿಲ್ಲರೆಯ ದೊಡ್ಡಗಂಟನ್ನು ಕಟ್ಟುತ್ತಿದ್ದ ಮಹಾ ಗಾರುಡಿಗ. ಎಂತಹ ಹಾವನ್ನಾದರೂ ಕ್ಷಣಾರ್ಧದಲ್ಲಿ ಹಿಡಿದು ಚೀಲಕ್ಕೆ ತುರುಕಿಕೊಳ್ಳುತ್ತಿದ್ದ ಚಾಲಾಕಿ,ಇಂದು ಗಡ್ಡ ಮೀಸೆಗಳು ಇವನ  ಮುಖವನ್ನು ಮುಳುಗಿಸಿಗುರುತನ್ನು ಅಳಿಸಿ ಹಾಕಿವೆ. ಬದುಕಿನ ಆಂದೋಲನಕ್ಕೆ ದಣಿದು ಅವನೇ ರೈಲಿನ ಒಂದು ಮೂಲೆಗೆ ವಶೀಕರಣಗೊಂಡಿದ್ದಾನೇನೋ?ಅನ್ನುವಂತೆ ಬೋಗಿಯಮೂಲೆಯನ್ನು ದಿಟ್ಟಿಸುತ್ತಾ ಕೂತಿದ್ದಾನೆ. ತನ್ನೆಲ್ಲಾ ಶಕ್ತಿಯನ್ನು ಯಾವ ಅರ್ಜುನನಿಗೆ ಧಾರೆ ಎರೆದ?ಯಾವ ಕುಂತಿಗೆ ದಾನಮಾಡಿದ?ಅಥವಾ ಏಕಲವ್ಯನ ಹೃದಯಹೀನ ದ್ರೂಣಪುತ್ಥಳಿ ಮೋಸದ ತಕ್ಕಡಿ ತೂಗಿ ಕೊಂಡಿತೋ?ಎಂಬ ಪ್ರಶ್ನೆಗಳು ಚಕಮಕಿಗೊಂಡು ಆ ಮಾಂತ್ರಿಕನನ್ನು ಮಾತನಾಡಿಸಲು ಪ್ರಚೋದಿಸಿದವು.


ಭಿಕ್ಷುಕನ ವೇಶದಲ್ಲಿದ್ದ ಈ ಜಾದೂಗಾರನನ್ನು ಮಾತನಾಡಿಸಲು ಯಾವ ಪ್ರಶ್ನೆಯ ಬಾಣವನ್ನು ಬಿಡಲಿ? ಹೇಗಿದ್ದೀಯ?ಎಂದರೆ ಮೂರ್ಖನಾಗುವೆ. ಎಲ್ಲಿಗೆಹೊರಟೆ?ಎಂದರೆ ಅಸಮಂಜಸ ಆದರೂ ಸ್ವಾಭಿಮಾನ ಬದಿಗಿಟ್ಟು ಪ್ರಶ್ನಾಕೃತಿಯ ಅನೇಕ ಬಾಣಗಳನ್ನು ಪ್ರಯೋಗಿಸಿದರೂ, ಮೌನವೇ ಅವನ ಉತ್ತರವಾಗಿತ್ತು.ಮೈಮುಟ್ಟಿ ಮಾತನಾಡಿಸಿದರೂ ಅಷ್ಟೇ, ನನ್ನ ಮುಖ ನೋಡಿ ಸ್ವಲ್ಪ ಹಿಂದೆ ಸರಿದು ತನ್ನ ತಲೆಯನ್ನು ತಿರುಗಿಸುತ್ತಾ ಹುಚ್ಚನಂತೆತುಸುನಟಿಸಿ ಮತ್ತದೇ ಮೂಲೆಯನ್ನು ದಿಟ್ಟಿಸುತ್ತಾ ಕುಳಿತ.ಅವನ ಸ್ಥಿತಿ ನನ್ನನ್ನೂ ಮೌನಿಯಾಗಿಸಿತು.ಏನೂ ಮಾತಾಡದೆ ನನ್ನ ದೇಹವನ್ನು ಅಲ್ಲಿಂದ ನನ್ನ ಸೀಟಿನೆಡೆಗೆ ಒಯ್ದೆ.ಅವನ ಗತ ದಿನಗಳನ್ನು ನೆನೆದುಕೊಂಡೆ.ನನ್ನ ಕಣ್ಣಿಗೆ ಅವನು ಕೇವಲ ದೊಂಬರಾಟ, ಹಾವಾಟ ಆಡುವ ಕಾಟ್‍ರಾಜ್ ಅಲ್ಲ, ಯಾರೋ ಹೆತ್ತು ಬಿಸಾಡಿದ್ದ ಹೆಣ್ಣು ಕೂಸನ್ನು ತನ್ನ ಮಗಳಂತೆ ಸಾಕಿಕೊಂಡಿದ್ದ ಆದರ್ಶವಾದಿ.ರಾತ್ರಿ ಹಗಲೆನದೆ ಯಾರ ಮನೆಯಲ್ಲಿ ಹಾವು ತೂರಿದರೂ ತಕ್ಷಣ ಅಲ್ಲಿಗೆ ಹೋಗಿ ಅವರ ಸಮಸ್ಯೆಯನ್ನು ತನ್ನ ಚೀಲದೊಳಗೆ ತುರುಕಿಕೊಳ್ಳುತ್ತಿದ್ದ ಸಮಾಜಸೇವಕ. ಇವನು ಸಂತೆಯಲ್ಲಿ ತೋರಿಸುತ್ತಿದ್ದ ಜಾದೂಗಳು ನನಗೆ ಇಂದಿಗೂ ವಿಸ್ಮಯವಾಗಿವೆ. ಅವುಗಳಲ್ಲಿ ಕೆವು ಇವನಿಂದಲೇ ಕಲೆತು ಮರೆತಿದ್ದೆ.ಕಣ್ಣಿಗೆ ನಿದ್ದೆ ಆವರಿಸುವಷ್ಟರಲ್ಲಿ ಅವನ ಆಟ ನೆನೆಸಿಕೊಂಡೆ.


      ಕಾಟ್‍ರಾಜ್ ಬಂದೀನ್ರೀ ಕಾಟ್‍ರಾಜ್, ಇವತ್ತು ಹೊಸ ಆಟ ತೋರಿಸ್ತೀನ್ರೀ, ಧಣಿಗಳು ಧರ್ಮ ಕೊಟ್ಟು ನನ್ನ ಬೆಳಿಸ್ಯಾರ್ರೀ.ಅವರಿಗೆ ಈ ಆಟ ತೋರ್ಸಾಕ್ ಬಂದೀನ್ರೀ.ಕಾಟ್‍ರಾಜ್ ಆಟ ಹಳ್ಳಿಲಿದ್ದ ದಿಲ್ಲಿಗೂ ಗೊತ್ರೀ.ಕಾಟ್‍ರಾಜ್ ಆಟ ನೋಡ್‍ಬರ್ರೀ. ಕಣ್‍ಕಟ್ ಇಲ್ಲಾ, ಮಾಟ ಇಲ್ಲಾ, ಮಂತ್ರ ಇಲ್ಲಾ, ತಂತ್ರ ಇಲ್ಲಾ ಇದ್ದದ್ದು ಇದ್ದಂಗ ತೋರ್ಸೋ ಆಟ ರೀ, ಕಾಟ್‍ರಾಜ್ ಆಟ. ಇವನ ಆ ಧ್ವನಿಗೆ ಜನ ಇವನ ಸುತ್ತಲೂ ನೆರೆದರು.


ಒಂದು ವೃತ್ತಾಕಾರದ ಬಿದಿರಿನ ಡಬ್ಬಿಯನ್ನು ತೋರಿಸುತ್ತಾ.

ನೋಡ್ರೀ ಈ ಡಬ್ಯಾಗೇನೈತ್ರೀ?

ಏನೈತ್ರೀ?  (ಹಿಂದಿನಿಂದ ಅವನ ಮಗ ಬಂಗಾಳಿ ಇವನ ಮಾತಿನ ಕೊನೆಯ ಪದವನ್ನು ಪುನರುಚ್ಚರಿಸುತ್ತಾನೆ)

ಸಂತೆಗೆ ಬಂದ ಜನರಲ್ಲಿ ಕಾಲುಭಾಗ ಕಾಟ್‍ರಾಜನ ಆಟದ ವೃತ್ತದ ಪರಿಧಿಯೇ ಆಗಿತ್ತು.


ಈ ಡಬ್ಬೇನಾಗ ನೋಡ್ರಿ!

ನೋಡ್ರೀ

ಇವತ್ತಿನ್ ಸೆಂತಿಗ್ ಬಂದ್ ಮದ್ಲಗಿತ್ತಿ ಅದಾಳ್ ರೀ

ಮದ್ಲಗಿತ್ತಿ ಅದಾಳ್ ರೀ.

ನಿನ್ನೆ ಗೌಡ್ರ ಹೊಲದಾಗ ಸಿಕ್ಲೂ ರೀ, ಅಬಾ ಬಾ ಬಾ ಬಾ ಬಾ.

ಅಬಾ ಬಾ ಬಾ ಬಾ.

ನೋಡ್ಬೇಕ್ರೀ ಇವ್ಳ ವಯ್ಯಾರಾನಾ

ಹೌದ್ರೀ.

ಗೌಡ್ರ ಹೊಲದಾಗ ಮದ್ಲಿಂಗನ್ ಹುಡುಕ್ತಿದ್ಲು ರೀ

ಹೌದ್ರೀ.

ನಮ್ಮೂರ್ ಗೌಡ್ರ ಮನ್ಸು ದೊಡ್ದೂ ರೀ.

ಮನುಸ್ ರೀ.

ಕಾಟ್‍ರಾಜನ್ನ ಕರ್ದು, ನೂರುಪಾಯ್ ಕೊಟ್ಟು

ಕೊಟ್ಟು.

ಮದ್ಲಗಿತ್ತೀನ್ ನೀನೇ ತಗಂಡೋಗ್ ಅಂದ್ರೂ ರೀ

ತಗಂಡೋಗ್ ಅಂದ್ರು ರೀ.

ಅವಳ್ನ ಹಂಗೆ ಮುದುರಕೊಂಡು ಬೊಕ್ಕಣದಾಗ ಇಟ್ಕಣಾಕ್ ನೋಡ್ದೇರೀ.

ಬೊಕ್ಕಣದಾಗ್ ಯಾರಿದ್ರೂ?.

ಬೊಕ್ಕಣದಾಗ ಈ ಹಸುರು ಮದ್ಲಿಂಗ ಇದ್ದಾ ರೀ.

ಸಣಕಲು ಸೊಂಟಕ್ಕೆ ಜೋತಾಡುವ ಪ್ಯಾಂಟಿನ ಕಿಸೆಯಿಂದ ಹಸಿರುಹಾವನ್ನು ತೆಗೆದು ಜನರೆದುರು ಮಂಗಳಾರತಿ ಮಾಡಿ ಬಂಗಾಳಿ ಕಡೆ ಎಸೆದ. ಬಗಾಳಿ ಅದನ್ನು ಸಿಂಬೆಯಂತೆ ಸುತ್ತಿ ಸಣ್ಣ ಖಾಲಿಬುಟ್ಟಿಯಲ್ಲಿ ಮುಚ್ಚಿಡುತ್ತಾ,

ಮತ್ತೆ ನಿನ್ ಚಡ್ಡೀ ಬೊಕ್ಕಣದಾಗ ಹಕ್ಕೆಬೇಕು.ಅಂದ.

ಹಸಿರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದ ಜನರು ನಕ್ಕು ಒಂದು ಹೆಜ್ಜೆ ಮುಂದೆ ಸರಿದರು.

ಏ ಚಡ್ಯಾಗಲ್ಲಾ ಲೇ ಬಂಗಾಳಿ

ಮತ್ತೆಲ್ಲಿ ಹಕ್ಕೆಂಡೆ.

ಪುಟ್ಯಾಗ್‍ಹಕ್ಕೊಂಡು ಸಂತ್ಯಾಗ ಎಲ್ಲಾ ಧಣಿಗುಳಿಗೆ ತೋರ್ಸಾನಾ ಅಂತ ತಂದೀನ್ರೀ.

ಮದ್ಲಗಿತ್ತಿ ಮಿಣಿಮಿಣಿ ಮಿಂಚ್ತಾಳ್ರೀ, ಪುಟ್ಯಾಗ್ ಹೋಕ್ಕಂಡು ಬುಸ್. (ಬುಸ್ ಎಂದು ಜೋರಾಗಿ ಶಬ್ದ ಮಾಡುತ್ತಾ ಬಂದು ಹೆಜ್ಜೆ ಮುಂದಿಟ್ಟು ಜನರೆಡೆಗೆ ತನ್ನ ಕೈಯಲ್ಲಿದ್ದ ಬುಟ್ಟಿಯನ್ನು ತೋರಿಸಿದ ಆದರೆ ತೆಗೆಯಲಿಲ್ಲ. ಯಾವುದೋ ಶಕ್ತಿಯುತ ಗಾಳಿ ದೂಕಿದಂತೆ ಜನರು ಹಿಂದೆ ಸರಿದರು)

ಬುಸ್ ಅಂದ್ಲು ರೀ

ಟುಸ್ ಅಂದ್ಲು ರೀ (ನೆರೆದ ಕೆಲವರು ನಕ್ಕು ಮತ್ತೆ ಮುಂದೆ ಸರಿದರು)

ಏ ಟುಸ್ ಅಲ್ಲಾ. ಬುಸ್.

ಕಾಟ್‍ರಾಜನ ಮಾತು ಮುಂದುವರೆಯುತ್ತಿದ್ದಂತೆ ವೃತ್ತದ ಮೂಲೆಯಲ್ಲಿ ಕುಳಿತಿದ್ದ ಅವನ ಹೆಂಡತಿ ರೂಪಾಳಿ ತನ್ನ ಕೂಸನ್ನು ಮಗನ ಕೈಗಿತ್ತು ವೃತ್ತದ ಮಧ್ಯೆ ಒಂದು ಮುಳ್ಳಿನ ಹಾಸನ್ನು ಹಾಸಿ ಮುಂದಿನ ಆಟಕ್ಕೆ ಸಿದ್ದತೆ ಮಾಡಿದಳು.



ಮದ್ಲಗಿತ್ತಿನಾ ಇವಾಗ್ ತೋರ್ಸಂಗಿಲ್ಲಾ

ಮತ್ಯಾವಾಗ್ ತೋರುಸ್ತೀ

ಒಂದು ಶಕ್ತಿ ಆಟ ನೋಡ್ರಿ ಧಣಿ

ಆಮೇಲ್ ಮದ್ಲಿಗಿತ್ತಿಗೆ ಎಂಗ್ ಮದ್ವೆಮಾಡ್ತೀನ್ ನೋಡ್ರಿ.

ಏ ಮದ್ಲಗಿತ್ತಿ ಜೋಪಾನ ಎಲ್ಲಾನ ಬುಟ್‍ಬುಟ್ಟೀಯಾ ಎಂದು ಮಗನ ಕೈಗೆ ಆ ಬುಟ್ಟಿಯನ್ನು ಕೊಟ್ಟು.

ವೃತ್ತದ ಮಧ್ಯದಲ್ಲಿ ರೂಪಾಳಿ ಹಾಸಿದ್ದ ಮುಳ್ಳಿಹಾಸಿನ ಹತ್ತಿರ ಬಂದು

ನೋಡ್ರೀ ಈ ಮಳೆ ಒರಿಜಿನಲ್ ರೀ, ಕಾಟ್‍ರಾಜ್ ಆಟದಾಗ ಎಲ್ಲಾ ಒರ್ಜಿನಲ್ ರೀ..

ಅಂಗಾರೆ ಅದರ ಮ್ಯಾಲೆ ಎಗರು. (ಜನರು ನಗುತ್ತಿದ್ದಂತೆ ಅದನ್ನು ಇಮ್ಮಡಿಗೊಳಿಸಲು)

ನಾನೆಗರಾದಲ್ಲಾ, ನಿನ್ನ ಅದ್ರುಮ್ಯಾಲೆ ಬಿಸಾಕ್ತೀ,

ಅಂತ ಮಗನ ಕಡೆ ಓಡಿದ.

ಅಯ್ಯಯ್ಯಪ್ಪೋ ಎನ್ನುತ್ತಾ ಮಗ ಅವನ ಹಿಂದೆ ಕಾಟ್‍ರಾಜ್ ಎರಡುಸುತ್ತಿನ ಮುಟ್ಟಾಟ ಮುಗಿಯುತ್ತಿದ್ದಂತೆ.

ಕಾಟ್‍ರಾಜನ ಹೆಂಡತಿ ತನ್ನ ದೇಹದ ಭಾರವನ್ನೆಲ್ಲಾ ಸಮವಾಗಿಸಿಕೊಂಡು ಮುಳ್ಳಿನ ಹಾಸಿನ ಮೇಲೆ ಮಲಗಿದಳು.

“ಕಾಟ್‍ರಾಜ್ ಶಕ್ತಿ ಆಟ ನೊಡ್ರಿ.ಏ ತಾಕತ್‍ಕಿಬಾತ್ ರ್ರಿ, ತಾಕತ್ ನೈ ಆಟ ನೈರ್ರಿ, ತಾಕತ್ ಇದ್ರೆ ಎಲ್ಲಾ ಇದ್ದಂಗ್‍ರೀ, ಸಕ್ತಿ ಇಲ್ಲಾಂದ್ರ ಏನಿದ್ರು ಇಲ್ದಂಗ್‍ರೀ” ಎನ್ನುತ್ತಾ

ಒಂದೂವರೆ ಎರಡೂವರೆ ಅಡಿ ಅಗಲದ ಒಂದು ಕಲ್ಲುಬಂಡೆಯನ್ನ ಎತ್ತಿ ಮುಳ್ಳಹಾಸಿನ ಮೇಲೆ ಮಲಗಿದ್ದ ತನ್ನ ಹೆಂಡತಿಯ ಮುಂಡದಮೇಲೆ ಉದ್ದವಾಗಿ ಇಟ್ಟು,

ಮನ್ಸಾಗೆ ಸಗುತಿ ಇದ್ರ ಗುಡ್ಡ ಬಡೀತಾನ್ರೀ

ಗಡ್ಡ ಬಡೀತಾನ್ರೀ.

ಲೇಗಡ್ಡ ನೈ ಲೇ ಗುಡ್ಡ ಗುಡ್ಡಾ.

ಹಾಂ, ಗುಡ್ಡ.

ಸಕ್ತಿ ಇಲ್ಲಾಂದ್ರೆ ಕಡ್ಲೆಗುಡ ಕಡಿಯಂಗಿಲ್ಲಾರೀ

ಕಡಿಯಂಗಿಲ್ರೀ

ನೋಡನ್ರೀ ಈ ನನ್ ಮಗನ್ ತೆಲೆಗಟ್ಟಿಗೈತಾ ಇಲ್ಲಾಂತ ಎನ್ನುತ್ತಾ ಮೂಲೆಯಲ್ಲಿದ್ದ ಉದ್ದವಾದ ಸುತ್ತಿಗೆ ಹಿಡಿದ

ಅಯ್ಯಯ್ಯಪ್ಪೋ.ಮತ್ತೆ ಒಂದು ಸುತ್ತು ತಂದೆ ಮಗನ ಮುಟ್ಟಾಟ ನಡೆಯಿತು.

ಸುತ್ತಿಗೆ ಕೈಲಿ ಹಿಡಿದು ತಿರುಗಿಸುತ್ತಾ.ರೂಪಾಳಿ

ಓಯ್ (ಮುಳ್ಳುಹಾಸಿನ ಮೇಲೆ ಮಲಗಿದ್ದ ಅವನ ಹೆಂಡತಿ ರೂಪಾಳಿ ಉತ್ತರಿಸುತ್ತಾಳೆ)

ನಿಂತಾಗ ಸಗುತಿ ಐತಾ.

ಐತೆ.

ಎಷ್ಟೈತೆ?

ಜಗ್ಗಿ ಐತೆ.

ನಿಂತಾವ ಸುಗುತಿ ಇದ್ರೆ, ಸುತ್ತ ನಿಂತಿರೋ ದಣಿಗಳು ಧರ್ಮ ಹಾಕ್ತಾರೆ

ಏ ರೂಪಾಳಿ.

ಓಯ್.

ದಣಿಗಳು ಧರ್ಮ ಕೊಟ್ಟಾರಿವತ್ತು ನಿನಗೇನ್ ಬೇಕು ಕೇಳು

ಏನ್ ಕೊಡ್ತೀ.

ಕೇಟಿ ಬೇಕಾ?

ಬ್ಯಾಡ.

90 ಬೇಕಾ?

ಬ್ಯಾಡ.

ಏನ್ ಬೇಕು ಕೇಳು.

ಹಸೆಕೋಳಿ ರಗುತ ಬೇಕು.

ಮತ್ತೆ ಕಾಟ್ ರಾಜ್ ಧರ್ಮ ಕೇಳುತ್ತಾ

ಧರ್ಮ ಹಾಕಿ ದಣಿ ಧರ್ಮ ಹಾಕಿ.ಇಲ್ಲಿ ನೆಲಕ್ಕೊಗಿರಿ ನಾ ತಗಾತಿನಿ.ದರ್ಮ ಹಾಕಿ ದಣಿ ಎಂದು ಕೇಳುತ್ತಿದ್ದಂತೆ, ಕೆಲವರು ಚಿಲ್ಲರೆ ಅವನೆಡೆಗೆ ಎಸೆದರು.ಚಿಲ್ಲರೆ ಮಳೆ ಹನಿಗುಟ್ಟಿ ನಿಲ್ಲುತ್ತಿದ್ದಂತೆ

ಜೈ ಕೌಳೆ ಮಾರೆಮ್ಮ, ಬಳ್ಳಾರಿ ದುರುಗಮ್ಮ (ಎಂದು ಜೋರಾಗಿ ಹೇಳುತ್ತಾಸುತ್ತಿಗೆಯನ್ನು ಎತ್ತಿ ತನ್ನ ಹೆಂಡತಿಮೇಲೆ ಮಲಗಿದ್ದ ಬಂಡೆಯಮೇಲೆ ಹಾಕಿದ. ಬಂಡೆ ಎರಡು ಹೊಳಾಯ್ತು )

ಬಂಗಾಳಿಚಪ್ಪಾಳೆಸದ್ದು ಕ್ಷಣದ ಮೌನ ಕೊಂದು ನೆರೆದ ಜನ ಅನುಸರಿಸುವಂತೆ ಮಾಡಿತು.ಬಂಗಾಳಿ ಚಿಲ್ಲರೆಯನ್ನು ಖಾಲಿಮಾಡಿಟ್ಟ ಬುಟ್ಟಿ ಹಿಡಿದು ಕಾಟ್‍ರಾಜ್ ಮತ್ತೆ ಎಲ್ಲರ ಹತ್ತಿರ ಹೋಗಿ ಧರ್ಮಕೊಡಿ ಧಣಿ ದರ್ಮಕೊಡಿ ಎನ್ನುತ್ತಾ ಎರಡು ಸುತ್ತುಹಾಕುತ್ತಿದ್ದಂತೆ ರೂಪಾಳಿ ಮುಳ್ಳುಹಾಸನ್ನು, ಒಡೆದ ಬಂಡೆಯನ್ನು ಮೂಲೆಯಲ್ಲಿಟ್ಟು ಕುಳಿತಳು. ಬರಗಾಲದ ಮಳೆಯಂತೆ ಬುಟ್ಟಿಯಲ್ಲಿ ಸಂಗ್ರಹವಾದ ಚಿಲ್ಲರೆಯನ್ನು ರೂಪಾಳಿ ಕೈಗೆ ಕೊಟ್ಟು ಕಾಟ್‍ರಾಜ್ ಮುಂದಿನ ಆಟಕ್ಕೆ ತಯಾರಿಯಾಗಿ

ಏ ಬಂಗಾಳಿ.

ಓಯ್.

ಆ ಮದ್ಲಿಗಿತ್ತೀನ ಎಲ್ಲಿ ಬಿಟ್ಟೆ

ಗೋ ಇಲ್ಲೈತೆ.

ಹಾವಿನ ಬುಟ್ಟಿಯನ್ನು ತಂದೆಯ ಕೈಗೆ ಕೊಟ್ಟ.

ದಣಿ ಈವಾರದ್ ಸಂತೆ ಸ್ಪೆಸಲ್ ಈ ಮದ್ಲಿಗಿತ್ತಿ ಧಣಿ

ಇನ್ನ ಹಲ್ಲಿಕಿತ್ತಿಲ್ಲ ದಣಿ. ವಸಾ ಮದ್ಲಿಗಿತ್ತಿ ದಣಿ

ವಸಾ ಮದ್ಲಿಗಿತ್ತಿ.

ರೂಪಾಳಿ ತನ್ನ ತೊಡೆಯಮೇಲೆ ಕೂಸನ್ನು ಮಲಗಿಸಿ ಹಾಲುಣಿಸುತ್ತಾ ಚೀಲದಿಂದ ಕೆಲವು ಹಳ್ಳಾಕಿಸಿದ ಫೂಟೋಗಳನ್ನು ತೆಗೆದಿಡುತ್ತಿದ್ದಳು.

ಏ ಬಂಗಾಳಿ.

ಓಯ್.

ಆ ಪುಂಗಿ ಕೊಡು.

ಲುಂಗಿ ಇಲ್ಲಾ.(ನೆರೆದವರಲ್ಲಿ ಕೆಲವರು ನಕ್ಕರು)

ಉಸ್ಕಾ ದಿಮಕ್ ಕರಾಬ್ ಹೋಗಯಾ, ಲುಂಗಿಅಲ್ಲಲೆ ಪುಂಗಿ, ಪುಂಗಿ.

ಕಾಟ್‍ರಾಜ್ ಹಾವಿನ ಡಬ್ಬಿಯನ್ನು ನೆಲದಮೇಲಿಟ್ಟು ಮಗ ಕೊಟ್ಟ ಪುಂಗಿಯನ್ನು ಹಾವಿನ ಡಬ್ಬದ ಮೇಲಿಟ್ಟುತನ್ನ ಹೆಂಡತಿ ಕೈಯಲ್ಲಿದ್ದ ಗ್ರಾಫಿಕ್ಸ್ ನಲ್ಲಿ ಚಿತ್ರನಟರ ಜೊತೆ ತಾನು ನಿಂತಹಾಗೆ ತೆಗೆಸಿಕೊಂಡಿದ್ದ ಫೋಟೋಳನ್ನು ತೋರಿಸುತ್ತಾ, ಈಗಾಗಲೇ ಚಿಲ್ಲರೆ ಕೊಟ್ಟವರು ಹಿಂದೆ ಹೋಗಿ, ಕೊಡದವರು ಮುಂದೆ ಬನ್ನಿ ಎನ್ನುವ ಬೇಡಿಕೆಯನ್ನು ಪರೋಕ್ಷವಾಗಿ“ಇಂದುಕಿರಾ ದಣಿಗುಳು ಮುಂದೆ ಬರ್ಬೇಕ್. ಎತ್ತರಾ ಇರಾ ದಣ್ಯೋರು ಇಂದುಕೋಗಿ ದಣಿ.ಆ ಊರು ದಣ್ಯೋರು ಮುದುಕ್ ಬರ್ಬೇಕ್ ಈ ಊರು ದಣ್ಯೋರ್ ಮುಂದುಕ್ ಬರ್ಬೇಕ್” ಎಂದು ಕೆಲವರನ್ನು ತಾನೇ ಕೈಹಿಡಿದು ಮುಂದೆ ತಂದ.ಸುತ್ತಲಿನ ಜನರ ಮುಕ್ಕಾಲುಭಾಗ ಹಿಂದೆ ಮುಂದೆ ಆದದ್ದು ಖಚಿತಪಡಿಸಿಕೊಂಡು.

ದಣಿಗುಳೇ ನೋಡ್ರಿ ನನ್ ಆಟನಾ ಶಿವರಾಜ್‍ಕುಮಾರ್ ನೋಡ್ಯಾರ್ರೀ.

ಶಿರಾಜ್‍ಕುಮಾರ್ ನೋಡ್ಯಾರ್ರೀ.

ವಿಷಣುವರ್ದನ್ ನೋಡ್ಯಾರ್ರೀ.

ಹೌದ್ರೀ.

ಚಿರಂಜೀವಿ ನೋಡ್ಯಾರ್ರೀ.

ಚಿರಂಚೀವಿ ನೋಡ್ಯಾರ್ರೀ.

ಮತ್ತೊಮ್ಮೆ ಎಲ್ಲರಿಗೂ ತನ್ನ ಫೋಟೋಗಳನ್ನು ಪ್ರದರ್ಶಿಸಿ ರೂಪಾಳಿಗೆ ಕೊಟ್ಟು,

ಏ ಬಂಗಾಳಿ

ಓಯ್.

ದಣೇರ್ಗೇ ಮದ್ಲಗಿತ್ತಿ ತೋರ್ಸಾನಾ?

ಓ, ತೋರ್ಸು.

ದಣೇರೇ ನೋಡ್ರಿ ಇದಕ್ಕಿನ್ನ ಹಲ್‍ಕಿತ್ತಿಲ್ರೀ

ಹಲ್‍ಕಿತ್ತಿಲ್ರೀ.

ಓ ಮದ್ಲಗಿತ್ತೀ ಇಲ್ಲರೋ ದಣ್ಯೋರ್ನ ಒಂದ್ಸಾರಿ ಬಂದು ನೋಡು

ನೋಡು.

ನಿನಗ್ ಯಾರ್ ಬೇಕು ಅಂತಾ ಹೇಳು

ಹೇಳು.

ದಣೇರೇ ಹೊಸ ಮದ್ಲಿಗಿತ್ತೀ ಸಿಟ್ನಾಗದಾಳ್ ರೀ.

ಹೌದ್ ರೀ.

ನೋಡ್ತೀರೀ ಸಿಟ್ಟು.

ಓ ನೋಡ್ತೇವ್.


ಡಬ್ಬದ ಮೇಲಿನ ಪುಂಗಿಯಿಂದ ಹಾವಿನ ಡಬ್ಬದ ಮೇಲೆ ಕುಕ್ಕಿ ಮುಚ್ಚುಳ ತೆಗೆಯುತ್ತಿದ್ದಂತೆ ಬುಸ್ ಎಂದು ಬುಸುಗುಟ್ಟುತ್ತಾ ಪುಟ್ಟಿಯೊಳಗೆ ಸುತ್ತಿಕೊಂಡಿದ್ದ ಹಾವು ಅಂಗೈಯಷ್ಟಗಲದ ತನ್ನ ಹೆಡೆ ಬಿಚ್ಚಿ ಒಂದು ಮಾಳುದ್ದ ನಿಗರಿ ನಿಲ್ಲುತ್ತಿದ್ದಂತೆ ಮುಚ್ಚುಳದಿಂದ ಹಾಗೇ ಡಬ್ಬವನ್ನು ಮುಚ್ಚಿ ಕೈಯಲ್ಲಿಹಿಡಿದು ನಿಂತ.ಭಯಾನಕ ಹಾವು ಕಂಡ ಜನರ ಎದೆಡವಗುಟ್ಟಿದ ಸದ್ದು ಕೇಳುವಷ್ಟು ನಿಶ್ಯಬ್ದ ಸೀಳಿ,

ಏ ಬಂಗಾಳಿ

ಓಯ್.

ಮದ್ಲಿಗಿತ್ತಿ ಸಿಟ್ಟಾಗ್ಯಾಳ.

ಏನ್ ಮಾಡ್ಬೇಕ್?

ಮದ್ಲಿಗಿತ್ತಿಗೆ ಹಾಲ್ ಕುಡುಸ್‍ಬೇಕ್

ಹಾಲ್ ಕುಡುಸ್‍ಬೇಕ್.


ಮನಸಿದ್ ದಣೋರ್ ಯಾರಾನಾ “ಏ ಕಾಟ್‍ರಾಜಾ, ಇದಕ್ಕ ಹಾಲ್ ಕುಡ್ಸು ಅಂತ ದರ್ಮ ಕೊಡಬೇಕು.” ದಣಿ ಹಾಲು ಕುಡ್ಸಾಕ ದರ್ಮಕೊಡ್ರೀ ದಣಿ.ಮನಸ್ ಮಾಡಿ ಕೊಟ್ಟು ಆಟ ನೋಡ್ರಿ ದಣಿ.ಮಾಮೂಲ್ ಹಾವಲ್ಲ ದಣಿ ಬೆಂಗಳೂರ್ ಹಾವ್ ದಣಿ.ಹಾಲಿಗೆ ದರ್ಮ ಕೊಡ್ರಿ ದಣಿ ಎನ್ನುತ್ತಾ ಡಬ್ಬಿಯನ್ನು ಕೈಲಿಹಿಡಿದು ಮನಸಿಂದ ದರ್ಮ ನೀಡಿ ದಣಿ ಮನ್ಸಮಾಡಿ ಕೊಡ್ರಿ ದಣಿ ಎನ್ನುತ್ತಾ ಸುತ್ತು ಹಾಕಿದ.ಕೆಲವರು ಹೃದಯಯದ ಮುಂದಿನ ಜೇಬಿನಿಂದ ಕೊಟ್ರೆ ಇನ್ನುಕೆಲವರು ಲುಂಗಿಯ ಹಿಂದೆ ಅಡಗಿದ್ದ ಡ್ರಾಯರ್ ಜೇಬಿನಿಂದ ಕೊಟ್ರು.ಕಾಟ್‍ರಾಜ್ ಕೂಡ ಅಲ್ಲಿಂದಲೇ ಕೊಡು ಹೇಳಿದ್ದ ಆದರೆ ಉಪಯೋಗಿಸಿದ ಪದ ಎರಡಕ್ಷರದ ಜೇಬಿನ ಬದಲು ಮೂರಕ್ಷರದ ಮನಸ್ಸು ಆಗಿತ್ತು.ಡಬ್ಬದಮೇಲೆ ಹಾಕಿದ ಚಿಲ್ಲರೆಯನ್ನು ರೂಪಾಳಿಯ ಮುಂದು ಉದುರಿಸಿ ಡಬ್ಬಿಯನ್ನು ವೃತ್ತದ ಮಧ್ಯೆ ಇಟ್ಟು ಪುಂಗಿ ಹಿಡಿದು ನಾದ ಹೊರಡಿಸಿದ.


ಮೈ ಜುಮ್ಮೆನ್ನುವನಾದ,ಪುಂಗಿಯ ತಿದಿ ಚಿಮ್ಮಿಸಿದ ತರಂಗದ ನಾದಕ್ಕೆ ಸುತ್ತಲಿನ ಮಂದಿ ಸಮ್ಮೋಹನಗೊಳ್ಳುವ ನಾದ.ಇಡೀ ಸಂತೆಯನ್ನೇ ವಶೀಕರಿಸುವಂತಹ ನಾದ.ತನ್ನ ಬದುಕಿನ ನೋವನ್ನೆಲ್ಲಾ ಪುಡಿಮಾಡಿ ಗಾಳಿಯೊಂದಿಗೆ ಬೆರೆಸಿ ಊದು ಹೊರಡಿಸುತ್ತಿರುವ ನಾದ. ಕತ್ತಲೆಯ ಸಮಾಜದ ಬೆಳಕಿನ ದಾಹವನ್ನು ತೋರಿಸುವ ನಾದ.ಗುಯ್ ಎಂದು ಕಿವಿ ಮಂಪರಿಸುವಂತಹ ನಾದ.ನಾದ ಹೊರಡುತ್ತಿದ್ದಂತೆಯೇ, ಪುಟ್ಟಿಯಲ್ಲಿದ್ದ ಹಾವು ತನ್ನ ಬಲವಾದ ಹೆಡೆಯಿಂದ ಮುಚ್ಚುಳ ಗುದ್ದಿ, ಹೆಡೆಬಿಚ್ಚಿ ನಿಗರಿ ಆಂದೋಲನವನ್ನು ಪ್ರಾರಂಬಿಸಿತು.ದಲಿತರ ಹೋರಾಟದಂತೆವಿಷವಿಲ್ಲದ ಹೆಡೆಯಿಂದ ನೆಲಕುಕ್ಕಲಾರಂಭಿಸಿತು.ಮತ್ತೆ ಮತ್ತೆ ಮೇಲೆದ್ದ ಪುಂಗಿಯ ನಾದಕ್ಕೆ ಇನ್ನಷ್ಟು ನಿಗರಿ ಹೆಡೆಅಗಲಮಾಡಿ ತನ್ನದಲ್ಲದ ಸಮಾಜವನ್ನು ತೂಗಿ ನೋಡುವ ಹಾಗೆ ಜೋಕಾಲಿಯಂತೆ ಅಡಿಸುತ್ತಾ ನಿಂತಿತು.ಕಾಟರಾಜ್ ಪುಂಗಿನಾದದಲ್ಲಿ ಎಡಬಲದನಾದಗಳೂ ಇವೆ. ಅವು ಸಮಾಜದ ಎಡಬಲ ಸಿದ್ದಾಂತದ ಮುಖವಾಡ ತೊಟ್ಟ ರಾಜಕೀಯ, ರಾಜಕಾರಣ ಸಿದ್ಧಾಂತಗಳನ್ನು ಊದುವನಾದ.ಕಾಟ್‍ರಾಜನ ಕಣ್ಣಿನ ಹೊಳಪು ಮಿಂಚಿನಂತೆ ಸಿಡಿಯುತ್ತಿತ್ತು. ಹಾವಿನ ಹೆಡೆಯನ್ನು ಕಣ್ಣುಮಿಟುಕಿಸದೇ ತೋಡುತ್ತಿದ್ದ ಜನ ನಿಶ್ಯಬ್ದವನ್ನು ಕಾಯ್ದಿರಿಸಿದ್ದರು. ಕಾಟ್‍ರಾಜ್ ಒಂದು ಕೈಯಲ್ಲಿ ಪುಂಗಿ ಊದುತ್ತಾ ಮತ್ತೊಂದು ಕೈಯಿಂದ ಚಿಲ್ಲರೆ ಹಾಕಿ ಎಂದು ಸಂಜ್ಞೆ ಮಾಡಿದ.ಬಂಗಾಳಿ ಪುಟ್ಟಿಹಿಡಿದು ಸುತ್ತುಹಾಕಿದ.ಪುಂಗಿ ನಾದ ಜೋರಾಗುತ್ತಿದ್ದಂತೆ ಜುಯ್ ಎಂದು ಬೀಸಿದ ಗಾಳಿಗೆ ಎಚ್ಚರಗೊಂಡ ಹಾವು ಪುಂಗಿಯ ಸಾಂಪ್ರದಾಯಕ್ಕೆ ಹೆದರಿ ಪುಟ್ಟಿಯೊಳಗೆ ಸರಿಯಿತು.ಬಿಡಲಿಲ್ಲ, ಕಾಟ್‍ರಾಜ್ ಅದರ ಬಾಲ ದೇಹ ಮುಟ್ಟುತ್ತಾ, ಚಿಟಿಕೆ ಹಾಕುತ್ತಾ ಅದು ಕುಕ್ಕಲು ಬಂದಾಗ ಮಡಿವಂತರಂತೆಕಾಲು ಕೈ ಯನ್ನು ಜೋಪಾನವಾಗಿ ಹಿಂದೆ ಸರಿಸುತ್ತಾ ಪುಂಗಿಯನ್ನು ಊದುತ್ತಿದ್ದ.ಹಾವು ಮತ್ತು ಕಾಟ್‍ರಾಜನ ಪುಂಗಿ ಕಾಳಗ ಆದಿ ಅಂತ್ಯಗಳು ಅಳಸಿಹೋಗುವಷ್ಟು ದೀರ್ಘವಾಗಿ ನಡೆಯಿತು.ತನ್ನ ಪುಂಗಿ ನಾದದಿಂದ ಹಾವನ್ನು ಪಳಗಿಸುತ್ತಿದ್ದಂತೆಯೇ ಚಿಲ್ಲರೆಯ ಹನಿಗಳು ಅವನ ಆಯಾಸವನ್ನು ತೀರಿಸಿ ಮತ್ತೆ ಮತ್ತೆ ಊದಲು ಪ್ರೇರೇಪಿಸಿದವು. ಹಾವಿನ ಸಿಟ್ಟು ಮತ್ತು ಪುಂಗಿನಾದಗಳು, ಸಮಾಜದ ಮೇಲು-ಕೀಳು ಸ್ಥರಗಳ ನಡುವಿನ ಬಂಡಾಯವನ್ನು ಮೀರಿ, ಸಮಾನತೆಯ ಅಟ್ಟವನ್ನು ಏರಿ, ಪ್ರಶಾಂತ ಜೀವನ ಮತ್ತು ಸುಖದ ನಿದ್ರೆಯನ್ನೂ ಸವಿದು ಮತ್ತೆ ಈ ಹಾಳು ಸಂತೆಗೆ ಹಿಂದಿರುಗಿದ್ದವು. ಈ ಕಾಳಗ ಅದೆಷ್ಟೋ ಕ್ಷಣಗಳನ್ನು ಕೊಂದು ಗಳಿಗೆಗಳನ್ನು ದೂರ ಸರಿಸಿತ್ತು.ಆದರೂ ಕಾಟ್‍ರಾಜನ ಪುಂಗಿಯ ಅಟ್ಟಹಾಸ ಅಡಗಿಲ್ಲ. ಹಳ್ಳಿಯದಲಿತರ ವಿಷವಿಲ್ಲದ ಹೆಡೆಗೆ ಬೇಧತೋರುವ, ಸಮಾನತೆಯ ದಿಕ್ಕು ತಪ್ಪಿಸುವಸಾಂಪ್ರದಾಯಗಳ ಮಡಿವಂತಿಕೆಯ ಪುಂಗಿ ನಾದ ಅಲೆಯಂತೆ ಬಂದು ಬಡಿದು ಹಾವನ್ನು ಹೆಡೆಮುರಿದು ಪುಟ್ಟಿಯೊಳಗೆ ಹೆದರಿ ಅಡಗಿ ಕುಳಿಯುವಂತೆ ಮಾಡಿತು.ಕಾಟ್‍ರಾಜ್ ಎಷ್ಟು ಕಾಟಕೊಟ್ಟರೂ ಮತ್ತೆ ಅದು ಹೆಡೆಬಿಚ್ಚುವ ಸಾಹಸ ಮಾಡಲಿಲ್ಲ.


ದಣಿ ದರ್ಮ ಕೊಡ್ರಿ ದಣಿ ಮುಂದೆ ಇನ್ನ ಐತೆ ಆಟ ದರ್ಮ ಕೊಡ್ರಿ ದಣಿ. ಕಾಟ್‍ರಾಜ್ ತಾಗ ಯಾ ಆವು ಬಾಲ ಬಿಚ್ಚಾಕಿಲ್ಲಾ ದಣಿ.ದರ್ಮ ಕೊಡ್ರಿ ದಣಿ ಹಾಲ್‍ಕುಡುಸ್ಬೇಕು. ದರ್ಮ ಹಾಕಿ ದಣಿ ತನ್ನ ಕೈತುಂಬಾ ತುಂಬಿದ ಚಿಲ್ಲರೆಯನ್ನು ಹೆಂಡತಿಯ ಮುಂದೆ ಸುರಿದ.ತನ್ನ ಸೆರಗಿನಿಂದ ಕೂಸನ್ನು ಮುಚ್ಚಿ ಹಾಲುಣಿಸುತ್ತಿದ್ದ ರೂಪಾಳಿ ಚಿಲ್ಲರೆಯನ್ನು ಚೀಲಕ್ಕೆ ತುಂಬಲು ಮುಂದಾದಳು.


ಬಂಗಾಳಿ ಬಂದೇ ಗಾಲಿಯ ಸೈಕಲ್ ತುಳಿಯುತ್ತಾ, ಸುತ್ತು ಸುತ್ತುತ್ತಾ ಪುಟ್ಟಿ ಹಿಡಿದು ದರ್ಮ ಕೇಳಿ, ತನ್ನ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಮಧ್ಯದಲ್ಲಿ ಕುಳಿತ.

ಏ ಬಂಗಾಳಿ.

      ಓಯ್.

ಈ ಧಣೇರ್ ಕೈನಾಗ ಏನೈತೆ?

      ಕಲ್ಲಂಗ್ರಣೈತೆ. (ಜನರು ಚಪ್ಪಾಳೆ ತಟ್ಟುವಂತೆ ಆದೇಶಿಸಿದ)

ಈ ದಣೇರ್ ಕೈನಾಗೇನೈತೆ?

      ಏನಿಲ್ಲಾ.

ಏ ಬಂಗಾಳಿ

      ಓಯ್.

ಇದೇನು?

      ಅಸುರು ಟುವಾಲ್.

ಇದೇನು?

      ಕೈ.



ಇದೇನು?

      ಲುಂಗಿ.

ಅದ್ರಾಗೇನೈತೆ?

      ಕಾಣುವಲ್ತು.

ದಣಿ ಕಾಣವಲ್ತಂತೆ ಸ್ವಲ್ಪ ತೋರ್ಸು ದಣಿ.

ಜನರ ನಗು ಕಡಿಮೆಯಾಗುತ್ತಿದ್ದಂತೆ

ಕಾರ್ಡಿನ ಜಾದೂ, ಹಗ್ಗದ ಜಾದೂ, ಚೆಂಡಿನ ಜಾದೂ, ತೆಂಗಿನಕಾಯಿಯ ಜಾದು ಒಂದರ ಮೇಲೊಂದು ಪ್ರದರ್ಶನವಾದವು.


ದಣಿ ಈ ವಾರ ಆಟ ನೋಡೀರಿ. ಏನು ಮಿಸ್ಟೇಕಿಲ್ದಂಗೆ ಆಟ ತೋರ್ಸೀನಿ.ಮುಂದಿನ ವಾರ ಇನ್ನಾ ಹೊಸ ಆಟ ತೋರ್ಸತೀನ್‍ರೀಅನ್ನುತ್ತಾ, ಇದ್ಯಾವುದರ ಪರಿವಿಲ್ಲದೇ ಹಾಲುಗೆನ್ನೆಗೆ ಹಚ್ಚಿದ ಕಾಡಿಗೆಯ ಕಪ್ಪುಚುಕ್ಕೆಯ ಹಿಂದೆ ನಗುವಿನ ಬಿಳುಪನ್ನುಮರೆಮಾಚಿಕೊಂಡು ಮಣ್ಣಿನಲ್ಲಿ ಮಗ್ನವಾಗಿ ಆಡುತ್ತಿದ್ದ ಕೂಸನ್ನು ಎತ್ತಿ “ದಣೀ ಈ ಕೂಸೈತಲಾ ದಣೀ, ಒಂದು ವರುಸದ್ ಕೂಸು ದಣಿ.ಯಾರೋ ಚಟಕ್ಕ ಅಡುದು ನನ್ ಗುಡಿಸಿಲಿ ತಾಗ ಬಿಸಾಕೋಗಿದ್ರು ದಣಿ.ರಾತ್ರಿ ಇದು ಅಳಾದು ಕೇಳಿ ಹುಡಿಕಿ ನಾನೆ ಸಾಕೀನ್ ದಣಿ.ಈ ಕೂಸಿಗೆ ಹಾಲು ಕುಡ್ಸು, ಬಟ್ಟೆ ಕೊಡ್ಸು ಅಂತ ಯಾರಾನ ಮನಸಿದ್ ದಣ್ಯೋರು ದರ್ಮ ಮಾಡಿ ದಣಿ.ದಣ್ಯೋರಿಗೆ ಸಲಾಮ್ ಮಾಡಮ್ಮಾ ಸಲಾಮ್ ಮಾಡು” ಎಂದು ತಾನು ಎರಡೂ ಕೈ ಮುಗಿದು ತೋರಿಸಿದ.ಮಗು ತನ್ನ ಬೊಚ್ಚು ನಗುವಿನೊಂದಿಗೆ ಕಾಟ್‍ರಾಜನ ಸಲಾಮ್‍ನ್ನು ಅನುಕರಿಸಿತು. ಮಗುವನ್ನು ಎತ್ತಿಕೊಂಡು ಪುಟ್ಟಿಯನ್ನು ಹಿಡಿದು ಮಗುವಿಗೆ ಸಲಾಮ್ ಮಾಡು ಸಲಾಮ್ ಮಾಡು ಎಂದು ಮಗುವಿನ ಕೈಯಿಂದ ಸಲಾಮ್ ಮಾಡಿಸುತ್ತಾ,ಪ್ರತಿಯೊಬ್ಬರಿಂದಲೂ ದರ್ಮ ಕೇಳುತ್ತಾ ಸುತ್ತು ಹಾಕಿದ.ನೆರೆದಿದ್ದ ಜನರು ನೆತ್ತಿಯಮೇಲಿದ್ದ ಸೂರ್ಯನನ್ನೂ ಆಕಾಶದ ಮೂಲೆಗೆ ಸರಿಸಿದ್ದರು.ಜನರು ಕರಗಿದಂತೆ ದರ್ಮ ಕೇಳುವುದು ನಿಲ್ಲಿಸಿ ವೃತ್ತದ ಮೂಲೆಯಲ್ಲಿ ಎಲ್ಲವನ್ನೂ ಕಟ್ಟುತ್ತಿದ್ದ ಹೆಂಡತಿಗೆ ಸಹಾಯ ಮಾಡಿದ.

ಆ ಟೆಂಗಿನ ಕಾಯಿ, ಹಗ್ಗದ ಜಾದೂವಿನ ರಹಸ್ಯವೇನು?ಆ ಹುಡುಗ ಕಣ್ಣು ಕಟ್ಟಿಕೊಂಡು ಕಾಟ್‍ರಾಜ್ ಏನುತೋರಿಸಿದರೂ ಅದನ್ನು ಸರಿಯಾಗಿ ಹೇಗೆ ಹೇಳುತ್ತಿದ್ದ?ಆ ಕಾರ್ಡಿನ ಜಾದೂ ಹೇಗೆ ಮಾಡಿದ?ಆ ಚೆಂಡಿನ ಜಾದೂ, ಹಗ್ಗದ ಜಾದೂ ಹಿಂದಿನ ರಹಸ್ಯವೇನು?ಅವನ್ನು ತಿಳಿಯುವ ನನ್ನ ಕುತೂಹಲ ಮುಂದಿನ ವಾರದ ಆಟ ನೋಡಲು ಮುಂಗಡ ಕೊಟ್ಟಿತ್ತು.


      ಹುಣ್ಣಿಮೆಯ ಹಿಂದಿನ  ದಿನ ಹಳ್ಳಿಹೊರಗಿನ ಸಣ್ಣ ತಪ್ಪಲಲ್ಲಿ ಕಾಟ್‍ರಾಜ್‍ನ ಶೋಧನೆ ನಡೆಯುತ್ತಿತ್ತು. ಕಂಡ ಕಂಡ ಗಿಡ ಮೂಸಿ, ಎಲೆ ಚೂಟಿ, ಬೇರು ಅಗೆದು ಅದೇನೋ ಹುಡುಕುತ್ತಾ ಮಗ್ನನಾಗಿರುತ್ತಿದ್ದ.ಒಂದುವೇಳೆ ಹಾವೇನದರೂ ಕಂಡರೆ ನುಸುಳಲೂ ಬಿದಡೇ ಚೀಲಕ್ಕೆ ತುರುಕಿಕೊಳ್ಳುತ್ತಾ ಅವನು ಎನು ಹುಡುಕುತ್ತಿದ್ದಾನೋ ಅದು ಅವನ ಮತ್ತು ಅವನ ಚೀಲದೊಳಕ್ಕೆ ಬೀಳುತ್ತಿದ್ದವುಗಳ ನಡುವಿನ ರಹಸ್ಸವೇ ಸರಿ.ಒಂದು ವಿಶೇಷ ಬೇರನ್ನು ಕೆಂಪುಡಬ್ಬಿಯೊಳಗೆ ಹಾಕಿ ಮುಚ್ಚಿದರೆ ಅದು ಅಂದಿನ ಹುಡುಕಾಟಕ್ಕೆ ವಂದನಾರ್ಪಣೆಯಾಗುತ್ತಿತ್ತು.ಇವನು ಹಳ್ಳಿಯ ನಾಟಿ ವೈದ್ಯನೂ ಹೌದು. ಚೇಳು ಕುಟುಕಿದರೂ, ಹಾವು ಕಚ್ಚಿದರೂ ಊರಹೊರಗಿನ ಇವನಡೇರೆಯೇ ಕ್ಲಿನಿಕ್. ಹೆಂಗಸರ ಕಾಯಿಲೆ, ಗಂಡಸರ ಕಾಯಿಲೆ ಎಲ್ಲವೂ ಮಾಯವಾಗುವುದು ಇವನ ಡೇರೆಯೊಳಗೆ. ಹುಣಿಣಿಮೆಯ ಹಿಂದಿನ ಸಂಜೆ ಗೌಡರ ಹಿತ್ತಲಲ್ಲಿ ಮುಳುಗಿ ಗುಡಿಯ ಮುಂದೆ ತಲೆತಗ್ಗಿಸಿ ಮುದಿಹಾವಿನಂತೆ ಜೋಲಾಡುತ್ತಾ ತೇಲುತ್ತಿದ್ದ.ಏನಪಾ ಗೌಡ್ರು ದಾವತ್ ಜೋರೈತೆ ಅನ್ನೋ ಗೇಲಿಮಾತಿಗೆ ಲೇ ಬೇರು ಕೊಡಾವರ್ಗೇ ಗೌಡ ಆಮೇಲೆ ನಾನೇ ರಾಜ, ಈ ಊರಿಗೇ ರಾಜ ಎಂದು ತೊದಲಿನುಡಿದು ಗುಡಿಮುಂದೆ ಮುಗ್ಗರಿಸುತ್ತಿದ್ದ.ಗೌಡನ ಪುರುಷತ್ವ ವರ್ಧನೆಗೆ ಕೊಡುತ್ತಿದ್ದ ಬೇರು ಗೌಡನ ಹೊಲದ ಕೆಲಸಕ್ಕೆ ಬರುವ ಹೆಂಗಸರ ಪಾತಿರ್ವತ್ಯದ ಮತ್ತು ಮುಗ್ದ ಹೆಣ್ಣುಮಕ್ಕಳ ಕನ್ಯಾಪೊರೆ ಗೌಡನ ಮಂಚದಲ್ಲಿ ಕಳಚುವಂತೆ ಮಾಡುತ್ತಿತ್ತು.

      ಕಾಟ್‍ರಾಜನ ಅಮಲಿನಿಂದ ನಿಧಾನವಾಗಿ ನಿಚ್ಚಳವಾಗುತ್ತಾ ಯಾವುದೋ ಜಂಕ್ಷನ್‍ನಲ್ಲಿ ನಿಂತ ರೈಲಿನ ಕಿಟಗಿಗೆ ಆನಿಸಿದ್ದ ಕಿವೆಗೆ ಚಾಯ್ ಮಾರುವವನ ಕೂಗು ಸಿಡಿಲಿನಂತೆ ಬಡಿದು ನಿದ್ದೆಯಮೋಡವನ್ನು ಚದುರಿಸಿ ಪ್ಲಾಟ್‍ಫಾರಂ ಲೈಟ್‍ನ ಬೆಳಕು ಮನಸ್ಸನ್ನು ವಾಸ್ತವಕ್ಕೆ ಜಗ್ಗಿತು.ಎಲ್ಲಜನರಿಗೂ ಮೋಡಿಮಾಡಿ ಚಿಲ್ಲರೆ ಕಸಿಯುತ್ತಿದ್ದ ಕಿಲಾಡಿ ಇಂದು ಇಲ್ಲಿ ಹೀಗೇಕಿದ್ದಾನೆ? ಎಂಬುದು ಪ್ರಶ್ನೆಯಾಗಿಯೇ ಉಳಿಯುವುದು ಇಷ್ಟವಿರಲಿಲ್ಲ.ಅವನ ಆಟ ಸುತ್ತ ಹತ್ತಳ್ಳಿಯ ಸಂತೆಯ ವಿಶೇಷವಾಗಿರುತ್ತಿತ್ತು.ಎಲ್ಲರನ್ನೂ ಮನರಂಜಿಸುವ ಇವನು ಇಂದು ಮನನೊಂದವನಂತೆ ಕೂತಿದ್ದಾನೆ ಇದರ ಹಿಂದಿನ ಕಥೆ ಏನು?ಇದನ್ನು ತಿಳಿಯುವುದೊಂದೇ ಆಶಯವಾಗಿತ್ತು.ಹಸಿದಹೊಟ್ಟೆ ಕಾಟ್‍ರಾಜನ್ನು ಮಾತನಾಡಿಸಲು ಮತ್ತೊಂದು ಅವಕಾಶ ಮಾಡಿಕೊಟ್ಟಿತು.ಅವನಿಗೆ ಊಟ ಕೊಡಿಸಿದೆ.ತನ್ನ ಸಣ್ಣ ಗಂಟಲಲ್ಲಿ ಹಿಡಿಯದ ದೊಡ್ಡ ದೊಡ್ಡ ತುತ್ತುಗಳನ್ನು ಪ್ರಯಾಸದಿಂದ ನುಂಗುತ್ತಾ ಊಟ ಮುಗಿಸಿದ. ಅವನ ಮುಖವೂ ಹಸಿದಿತ್ತು ಎಂಬುದಕ್ಕೆ ಆಕಾಶದ ಚಿಕ್ಕಿಗಳಂತೆ ಗಡ್ಡ-ಮೀಸೆಗೆ ಹತ್ತಿದ ಅಗಳುಗಳು ಸಾಕ್ಷಿಯಾಗಿದ್ದವು. ಕೈ ಮುಖ ತೊಳೆದುಕೊಂಡ, ನೀರು ನಂತರ ಒಂದು ಟೀ ಕೂಡ ಆಯ್ತು ಎಲ್ಲ ಮುಗಿದಮೇಲೆ  ಮತ್ತದೇಮೂಲೆಯನ್ನು ದಿಟ್ಟಿಸುತ್ತಾ ಕುಳಿತ.ಇವನಿಗೆ ಹುಚ್ಚು ಹಿಡಿದಿದೆ ಎಂದು ದೃಢವಾಯಿತು. ಕಣ್ಣು ಮುಚ್ಚಿ ದೀರ್ಘಶ್ವಾಸ ತೆಗೆದುಕೊಂಡು ಕಣ್ಣು ಬಿಡುವಷ್ಟರಲ್ಲಿ, ಕಾಟ್‍ರಾಜ ನೀರುತುಂಬಿದ ಕಣ್ಣಿನಿಂದ ನನ್ನ ಕಾಲು ಮುಟ್ಟಿ


“ಸಾಮೀ ಎಲ್ಲಾ ಓತು ಸಾಮೀ, ಎಲ್ಲಾ ಓತು, ಎಲ್ಲಾ ನಾಸನೆದ್ದೋತು ಸಾಮೀ, ಎಲ್ಲಾ ಓತು”

ಎಂದು ಕಣ್ಣೀರುತೆಗೆದ.

ಸಮಾಧಾನ ಮಾಡಲು ಮುಂದಾದೆ, ಆದರೆ ಮಾರ್ಗ ತಿಳಿಯದೇ “ಇರ್ಲಿ ಬಿಡು ಸುಮ್ನಾಗು, ಹೌದು ನನ್ನ ಗುರ್ತು ಸಿಕ್ತಾ?”ಎಂದು ಅವನ ಅಳಲು ನಿಲ್ಲಿಸಲು ಆಶ್ಚರ್ಯದ ಪ್ರಶ್ನೆ ಎಸೆದೆ.

“ಸಾಮೀ ನೀವು ನನಗೆ ಅವತ್ತು ನಾನು ಬೇಸಿದ್ದಾಗ ಉಟ ಕೊಟ್ರಿ, ಇವತ್ತು ಹಿಂಗಿದ್ದಾಗೂ ಊಟ ಕೊಟ್ರಿ ನಿಮ್ಮನ್ನ ಮರೇಕಾಗ್ತದಾ ಸಾಮಿ.” ಅಂದ

“ಅದು ಸರಿ ಏನಿಲ್ಲೀ?ಏನಿದು ಹೊಸ ಅವತಾರ, ಈ ರೈಲಿನಲ್ಲಿ ಯಾವ್ ಹಾವ್ ಹುಡುಕ್ಕೊಂಡು ಬಂದೆ.”ಎನ್ನುತ್ತಿದ್ದಂತೆ

ಮೋಲೆ ನೋಡುತ್ತಾ ವಿಪರೀತ ಭಯಭೀತನಾದವನಂತೆ ಕೈಗಳನ್ನು ಅಲುಗಾಡಿಸುತ್ತಾ,

“ಸಾಮೀಹಾವು ಅಂತ ಅನ್ಬೇಡ್ರಿಸಾಮೀ, ಹಾವಿನ್‍ಸುದ್ದೀನೇ ತೆಗೀಬ್ಯಾಡ್ರಿಸಾಮಿ, ಭಯ ಆಗ್ತೈತೆ”. ಎಂದ

ಊಟ ಹೊಟ್ಟೆಯಲ್ಲಿ ಇಳಿಯುತ್ತಿದ್ದಂತೆ ಅಲ್ಲಿದ್ದ ದುಃಖದ ಕಥೆಗಳೆಲ್ಲಾ ಎಳೆಎಳೆಯಾಗಿ ಹೊರಬಿದ್ದವು.“ಯಾಕೆ ಅವತ್ತೂ ನಮ್ಮನೇಲಿ ಬಂದಿದ್ ದೊಡ್ಡ ಹಾವನ್ನ ಹಂಗೆ ಪುಂಗಿ ಊದಿ, ಹೊರಗೆಳ್ದು, ಚೀಲಕ್ಕಾಕ್ಕೊಂಡು ಹೋದೆ.”“ಇಲ್ಲಾ ಸಾಮೀ ಅನ್ನಕೊಟ್ಟು ದಣಿ ನೀವು ಸುಳ್ಯಾಕೆ ಬೊಗುಳ್ಲಿ.ಹಾಳು ವಟ್ಟೇಪಾಡಿನಾಸಿಗೆ ನಾನೇ ಅವಾಗವಾಗ ಬಂಗಾಳಿ ರಾತ್ರಿ ಬಿಕ್ಷೆಗೋದಾಗ ಕೊಟ್ಟು ಬುಡುಸ್ತದ್ದೇ ಸಾಮಿ.” ಅಂದ

ಅವನ ಪಕ್ಕದಲ್ಲೇ ಕೂತು “ಸರಿ ಬಿಡು, ಏನಾಯ್ತು ಎಲ್ಲಾ ಚನಾಗಿತ್ತಲ್ವಾ?ಯಾಕೆ ಹಿಂಗಾಯ್ತು” ಎಂದು ಎಲ್ಲಾ ಕೇಳಲು ಮುಂದಾದೆ.


“ಎಲ್ಲಾ ಬೇಸಿತ್ತು ಸಾಮಿ, ವಾದ್ ನಾಗರಮಾಸ್ಯಾಗೆ ಸಂತ್ಯಾಗ ತೋರ್ಸಾಕಾ ಹೊಸ ಹಾವು ಹಿಡಿಕಂಡು ಮನಿಗೋದೆ ಸಾಮಿ. ಯೆಂಡ್ರು ಎದೆನೋವು ಅಂತ ಅಳ್ತಿದ್ಲು ಸಾಮಿ, ಆಮ್ಯಾಗ ಬಂದು ಹಲ್ಲುಕಿತ್ತಿದ್ರೆ ಆಯ್ತಂಕಂಡು ಚೀಲದಾಗ ಮುಚ್ಚಿಕ್ಕಿ  ಆಸ್ಪತ್ರೆಗೆ ವೋದೆ ಸಾಮಿ. ಡಾಕ್ರು ನಂ ರೂಪಾಳಿ ಎದೆ ಸರಿಗಿಲ್ಲ ಅಂದ್ರು ಸಾಮಿ. ಅದೇನಾ ಎಕ್ಸರಾ ಅಂತಾ ಏನೇನೋ ಅಂದ್ರು ಸಾಮಿ, ರೊಕ್ಕಗುಡಾ ಜಗ್ಗಿ ಕರ್ಚಾಗ್ತತೆ ಅಂದ್ರು ಸಾಮಿ. ಬಂಡೆ ಒಡಿತಿದ್ದೆ ಸಾಮಿ ಆ ಎದೆ ಮ್ಯಾಲೆ. ಬಂಡೆಗಿಂತ ಗಟ್ಟಿ ಎದೆನ ಡಾಕ್ರು ಸರಿಇಲ್ಲಾ ಅಂದ್ರು ಸಾಮಿ. ಗುಳಿಗೆ ಬರಿಸ್ಕೆಂಡು ರೊಕ್ಕಕ್ಕ ಆ ಸುಡುಗಾಡು ಗೌಡ್ರ ಮನಿಗೋದೆ ಸಾಮಿ. ಆ ಬೋಸುಡಿ ಮಗ ಮುದಿ ಗೌಡಗ ಆಕಡೆ ಹುಣ್ಣಿಮಿಗೆ ಕೊಟ್ಟು ಬೇರು ನನ್ ಯಂಡ್ರಕಡೆ ಕೆಟ್ಟಕಣ್ಣಾಗ ನೋಡಂಗ ಮಾಡ್ತು ಸಾಮಿ. ಗೌಡನ್ ಮಂಚ್ದಾಗ ಮಕ್ಕಂಡ್ ಯಾವ್ ಹೆಂಗ್ಸಿನ್ ಶಾಪ ಅನ್ಕಂಡು ಸೀದಾ ಮನೆಗೆ ಬಂದು ನೋಡಿದೆ,್ರ ಆ ಹೆಣ್ಣು ಕೂಸಿಗೆ ಮನ್ಯಾಗ ಆಡಾಕ ಆವೇ ಸಾಮಾನು ಸಾಮಿ. ಆ ಯಾವು ಯಾವತ್ಲಿಂದ ಸೇಡಿಟ್ಕಂಡಿತ್ತೋ ಏನೋ ನನ್ ಬಂಗಾಳಿನಾ ಕೂಸ್ನಾ ಕಡ್ದು ಯಾದೋ ಗುಡ್ಡುದ್ ಕೊಲ್ಲಿಂದೆ ಬಚ್ಚಿಂಕಂಡಿತ್ತು ಸಾಮಿ. ಸತ್‍ಬಿದ್ ಮಕ್ಕಳ್ನೋಡಿ ಕೆಳಗ್ ಬಿದ್ ರೂಪಾಳಿ ಏನೇಳಿದ್ರು ಎದ್ದೇಳಿಲ್ಲಾ ಸಾಮಿ. ಗುಂಡಿಗೆ ನಿಂತೋಗಿತ್ತು ಸಾಮಿ. ನಂತಾಕ ಒಂದಿಸಾಗುಡ ಒಂದು ರುಪಾಯಿ ಕೇಳಿದ್ದಿಲ್ಲಾ ಸಾಮಿ. ರೊಕ್ಕಾ ಬೇಕಿತ್ತಂದ್ರೆ ಅವೃಪ್ಪ ಕೊಟ್ಟಿದ ಹೆಬ್ಬಾವಿಟ್ಕಂಡು ಓಣಿ ಸುತ್ತಿ ಎಲ್ಲಾ ತರ್ತಿದ್ಲು ಸಾಮಿ. ಎಲ್ಲಾ ಆಳಾಗೋಯ್ತು ಸಾಮಿ ಎಲ್ಲಾ ನಾಸನೆದ್ದೋಯ್ತು.ರೂಪಾಳಿನ, ಮಕ್ಳುನ ಮಣ್ಣುಮಾಡಿ ಮನಿಗ್‍ಬಂದು ಎಲ್ಲಾ ಆವುಗುಳ್ನ ನಾನೇ ಸುತ್ತಿಗೆ ತಗಾಂಡು ಬಡುದು ಸಾಯ್ಸಿಬುಟ್ಟೆ ಸಾಮಿ. ಎಲ್ಲಾರು ನನ್ನ ಉಚ್ಚ ಉಚ್ಚ ಅಂದ್ರ. ಮರುದಿನ ಸೆಂತ್ಯಾಗ ಕಾಯಿಗಡ್ಡೆ ಮಾರಾನ ಅಂತ ಗೋಣಿಚೀಲ್ದಾಗ ಕಾಯಿಗಡ್ಡೆ ಅಕ್ಕೆಂಡು ಹಾವಾಟ ಆಡ್ತಿತ್ ಜಾಗಕ್ಕೋದ್ರೆ, ಅಲ್ಲಿ ಗೌಡುನ್ ವಸಾ ಮಂಡಾಳಂಗ್ಡಿ ಎದ್ದಿತ್ತು ಸಾಮಿ. ಎಲ್ಲಾ ಬುಟ್ಟು ಈ ರೈಲ್ನಾಗ ಸಯಾದು ಕಾಯ್ತದಿನಿ ಸಾಮಿ.” ಎಂದ

ಅವನ ಅಳು ಎಂತಹ ಕಣ್ಣಿರಿನ ವೃರಿಗೂಕರಳನ್ನು ಕಲುಕಿ ವೃತ ಮುರಿಸುವಂತ್ತಿತ್ತು. ಆ ನಡಗುವ ಧ್ವನಿ,ಅವನ ರೋಧನೆ ಕಂಡವರಿಗೇ ಹುಚ್ಚು ಹಿಡಿಯುವಂತಿತ್ತ್ತು. ಹುಚ್ಚನಾಗುವುದು ಸುಲಭ ಆದರೆ ಈ ಎಲ್ಲಾನೋವನ್ನು ನುಂಗಿಕೊಂಡು ಹುಚ್ಚನಂತೆ ನಟಿಸುವುದು ನರಕ ಸದೃಶವಾದ ಯಾತನೆ. ಇವನು ಕಂಡೊಡನೆ ಇವನ ಜಾದೂ ಗುಟ್ಟನ್ನು ತಿಳಿಯಲು ಮುಂದಾಗಿದ್ದೆ. ಆದರೆ ಆ ಜಾದೂವಿನ ಹಿಂದಿದ್ದ ಗರಡಿಯನ್ನು ನನ್ನ ಕಣ್ಣಮುಂದೆ ಬಿಚ್ಚಿಟ್ಟಮೇಲೆ ಮೂಕನಾದೆ.ಅವನು ಎಷ್ಟೋ ತಿಂಗಳಿಂದ ಇದೇ ರೈಲಿನಲ್ಲಿದ್ದಾನೆ. ಭಿಕ್ಷೆ ಬೇಡಿ ಹಸಿವನ್ನು ಕೊಂದು ಜೀವನ ನಡೆಸುತ್ತಿದ್ದಾನೆ. ನಿದ್ದೆಯನ್ನು ಛಳಿಗೆ ಮಾರಿ ದಿನಗಳನ್ನು ಕಳೆಯುತ್ತಿದ್ದಾನೆ.


ಪ್ರಯಾಣ ಮುಗಿಸಿ ಊರಿಗೆ ಬಂದ ಕೆಲಸವೂ ಮುಗಿಸಿ ಮರು ಪ್ರಯಾಣಕ್ಕೆ ಸಿದ್ದನಾದರೂ ನನ್ನ ಕಿವಿಯಲ್ಲಿ ಅವನಾಡಿದ ಪ್ರತಿ ಮಾತು ಪ್ರತಿಧ್ವನಿಸುತ್ತಿದೆ.ಆ ಕರಾಳ ಬದುಕಿನ ವಿಷದಲ್ಲಿ ಈಜುತ್ತಿದ್ದ ಕಾಟ್‍ರಾಜ್ ಮುಳುಗುವ ಮುನ್ನ ಅವನಿಗೊಂದು ದಿಕ್ಕು ತೋರಿಸಬೇಕೆಂಬ ಹಂಬಲ ಚಿಗುರಿತು.ಎಲ್ಲಿಯಾದರೂ ಅವನಿಗೆ ಪುನರ್ವಸತಿ ಕಲ್ಪಿಸೋಣವೆಂದು ರೈಲಿನಲ್ಲೆಲ್ಲಾ ಹುಡುಕಿದೆ.ಎಲ್ಲಿಯೂ ಅವನು ಕಾಣಲಿಲ್ಲ. ನಾನು ಹಾವಾಗಬಾರದೇ ವಾಸನೆಯಿಂದಲೇ ಅವನ್ನು ಪತ್ತೆಹಚ್ಚುತ್ತಿದ್ದೆ.ಕಾಟ್‍ರಾಜನ ಹುಡುಕಾಟದಲ್ಲಿಅಷ್ಟುದ್ದ ರೈಲು ಒಂದು ದೊಡ್ಡ ಹಾವಿನಂತೆ ಊರ ಕಡೆಗೆ ತೆವಳಲು ಸಿದ್ಧವಾಗಿತ್ತು.ನಿರಾಶೆ ಮನಸ್ಸನ್ನು ಹೊಕ್ಕುತ್ತಿದ್ದಂತೆ ಒಬ್ಬ ಭಿಕ್ಷುಕ ಭಿಕ್ಷೆ ಕೇಳಿದ, ಕೊಟ್ಟು ಅವನ್ನನು ಹಿಂಬಾಲಿಸಿದೆ ಅವನೂ ಹುಚ್ಚನಂತೆ ನಟಿಸಿದ, ಹಿಂಬಾಲಿಸುವುದು ಕಂಡು ನಟನೆ ಜೋರುಮಾಡಿ ಒಂದು ಕಡೆ ನಿಂತಮೇಲೆ ಅವನ ಹುಚ್ಚಿಗೆ ಊಟದ ಓಷಧಿ ಕೊಟ್ಟು ಕಾಟ್‍ರಾಜನ ಬಗ್ಗೆ ವಿಚಾರಿಸಿದೆ.

ನಾನು ಕನಸಿನಲ್ಲಿಯೂ ಬಯಸದ ಉತ್ತರವನ್ನು ಕೊಟ್ಟ.“ಸಾರ್ ನಿನ್ನೆ ಬೆಳಿಗ್ಗೆ ಪಕ್ಕದ ಪ್ಲಾಟ್‍ಫಾರಂ ಮೇಲೆ ಮಲ್ಕಂಡೋನ್ ಮಲ್ಕಂಡಂಗೇ ಹೋಗಿದ್ದ.ಮುನಿಸಿಪಾಲ್ಟಿಯೋರು ಹೆಣ ಹಾಕ್ಕೊಂಡು ಹೋದ್ರು” ಅಂದು ಮತ್ತೆ ಹುಚ್ಚನ ನಾಟಕ ಮುಂದಿವರಿಸುತ್ತಾ ಮಾಯವಾದ.ಎಂದೋ ತಣ್ಣಗಾಗಿದ್ದ ಕುತೂಹಲ ಕಾಟ್‍ರಾಜನ ಕಂಡು ಚಿಲುಮೆಯಂತೆ ಜಿಗಿಯಿತು, ಕೇಳುವಷ್ಟರಲ್ಲಿ ಕಾಟ್‍ರಾಜ್ ತನ್ನ ಬದುಕಿನದೊಡ್ಡ ಜಾದೂ ತೋರಿಸಿದ.ಅವನು ಮಾಡುತ್ತಿದ್ದ ಜಾದೂಗಳ ಬಗ್ಗೆ ಎಷ್ಟು ಕೇಳಿದರೂ, ಎಲ್ಲೀಯೂ ಸುಳಿವು ಸಿಗದಂತೆ “ನಮ್ಮಪ್ಪ ಯಾದೋ ಜಾದೂಲೋಕುಕ್ಕೋಗಿ ಅಲ್ಲಿಂದ ಕಲ್ತಕಂಡು ಬಂದು ನನಿಗೆ ಸೊಲುಪು ಏಳ್ಕೊಟ್ಟರ ನನಿಗೆ ಮಾಡಾಕ ಬರ್ತೈತೆ ಅಷ್ಟೆ” ಎಂದು ಎಷ್ಟೋ ಬಾರಿ ಸಮಾಧಾನ ಮಾಡಿದ್ದ.ನನ್ನ ಕುತೂಲಹ ಸಮಾಧಿಯಾದರೂ ನೀನು ಚಿರಾಯು ಕಾಟ್‍ರಾಜ್.ನೀನು ಜಗತ್ತಿನ ಅದ್ಭುತ ಜಾದೂಗಾರÀ.ಜಗತ್ತಿನಿಂದಲೇ ಮರೆಯಾದ ಮಾಂತ್ರಿಕ.


ಗೌತಮ್ .ಪಿ.ಆರ್

ಮೊ:8553111700

1 comment:

  1. A real Story Of a snake hunter from rural side (kurugodu region)

    ReplyDelete

Thank You and have a great time