Monday, November 16, 2015

Reservation System in India Needs Recast

ಸಮಾಜದಲ್ಲಿ ಸಮಾನತೆ ಸಾಧನೆಗೆ ಇರುವ ಜಾತಿ ಆಧಾರಿತ ಮೀಸಲಾತಿಯ ತಿದ್ದುಪಡಿ ಅತ್ಯವಶ್ಯಕ



ಪ್ರಾಚೀನ ಭಾರತದಲ್ಲಿ (ಸುಮಾರು 1500 ವರ್ಷಗಳ ಹಿಂದಿನಿಂದಲೂ) ಭಾರತ ದೇಶದಲ್ಲಿ ವರ್ಣಪದ್ದತಿ ರೂಢಿಯಲ್ಲಿದ್ದು, ಬ್ರಾಹಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಲ್ಲಿ ಸಮಾಜ ವಿಂಗಡಣೆಯಾಗಿತ್ತು, ಬ್ರಾಹ್ಮಣ ಅತ್ಯಂತ ಉಚ್ಛ ಮಟ್ಟದಲ್ಲಿದ್ದು, ಶೂದ್ರರನ್ನು ಕೆಳಮಟ್ಟದಲ್ಲಿಟ್ಟು ಅಸ್ಪøಶ್ಯರಂತೆ ನಡೆಸಿಕೊಳುತ್ತಿದ್ದುದು ಇತಿಹಾಸದಿಂದ ತಿಳಿದುಬರುತ್ತದೆ. ಅದಕ್ಕೂ ಹಿಂದೆ ಒಂದೇ ಜಾತಿ ಇದ್ದು, ಸಂಪ್ರದಾಯ ಮತ್ತು ಆಚರಣೆಯ ಅನುಕರಣೆಯಿಂದ ಹಾಗೂ ಬಹಿಷ್ಕರಣೆಯಿಂದ ವಿಭಿನ್ನತೆಗಳು ಪರಿಣಮಿಸಿದವು. ಕಸುಬು, ಬುಡಕಟ್ಟು ಜನಾಂಗದ ಸಂಘಟನೆಯ ಸಾಂಸ್ಕøತಿಕ ಪಳೆಯುಳಿಕೆಗಳು, ಹೊಸ ನಂಬಿಕೆಯ ಉದಯ, ವಲಸೆ ಮತ್ತು ಅಂತರ್ಜಾತಿಯ ಸಂತಾನಗಳು ಮತ್ತಿತರೆ ಪ್ರಮುಖ ಅಂಶಗಳು ಭಾರತದಲ್ಲಿ ಜಾತಿವ್ಯವಸ್ಥೆ ಹುಟ್ಟಲು ಮತ್ತು ಮುಂದುವರೆಯಲು ಕಾರಣವಾದವು. ಅದರಂತೆಯೇ ಅವಕಾಶಗಳ ಕೊರತೆ, ಆರ್ಥಿಕ ಸ್ಥಿತಿಗತಿ, ರಾಜಕೀಯ ಮತ್ತು ಸಾಂಸ್ಕøತಿಕ ಅನಿವಾರ್ಯತೆಗಳ ಫಲಿತವಾಗಿ ಹಿಂದುಳಿದ ಮತ್ತು ಶೋಷಿತ ವರ್ಗಗಳೂ ಸೃಷ್ಟಿಯಾದವು ಎಂಬುದು ಇತಿಹಾಸ ಕಾರರ ಮತ್ತು ವಿಚಾರವಾದಿಗಳ ಅಭಿಪ್ರಾಯ. 
ಈ ವ್ಯವಸ್ಥೆಯಿಂದ ಹೊರಬಂದು ಸಮಾಜದಲ್ಲಿ ಸಮಾನತೆ ಮತ್ತು ಐಕ್ಯತೆ ಸಾಧಿಸಲು ಹಲವಾರು ಚಳುವಳಿಗಳೇ ನಡೆದವು. ಸಮಾಜಸುಧಾರಕರು ಸಮಾಜದಲ್ಲಿ ಐಕ್ಯತೆಗಾಗಿ ಜಾತಿಪದ್ದತಿಯ ವಿರುದ್ಧ ಹೋರಾಡಿದರೇ ಹೊರತು ಮೀಸಲಾತಿಯ ಅನುಷ್ಠಾನ ಮಾಡಲಿಲ್ಲ. ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶ ಹೊಂದಿದ್ದ ಸುಧಾರಣಾ ಚಳುವಳಿಯ ಸಾಮಥ್ರ್ಯವನ್ನು ಅಂದಿನ ಸಮಾಜದ ಸಮುದಾಯಗಳ ಚಿಂತನೆಯ ಮಟ್ಟ ಮೊಟಕುಗೊಳಿಸಿತು. 
ಬ್ರಿಟೀಶ್ ಭಾರತದ ಅವಧಿಯಲ್ಲಿ ಬ್ರಿಟೀಷರು ಇಲ್ಲಿಯ ಕಸುಬುಗಳ ಬೆನ್ನೆಲುಬಾಗಿದ್ದ ಕಚ್ಚಾ ವಸ್ತುಗಳನ್ನು ತಮ್ಮ ದೇಶಗಳಿಗೆ ರವಾನಿಸಿ ಅಲ್ಲಿ ಉತ್ಪನ್ನವಾದ ಸಿದ್ಧ ವಸ್ತುಗಳಿಗೆ ಭಾರತದ ವಸಾಹತುಗಳನ್ನು ಮಾರುಕಟ್ಟೆಗಳಾಗಿ ಮಾಡಿಕೊಂಡರು. ಇದು ಭಾರತದ ಕುಲಕಸುಬುಗಳಿಗೆ ತುಂಬಲಾರದ ನಷ್ಟ ತಂದಿಟ್ಟು, ಕಸುಬುಗಳನ್ನು ವಿನಾಷದ ಅಂಚಿಗೆ ತಳ್ಳಿತು. ಆದರೆ ಬ್ರಿಟೀಷರು ಎಂದಿಗೂ ಜಾತಿ ವ್ಯವಸ್ಥೆಯನ್ನು ಅಳಿಸುವ ಪ್ರಯತ್ನ ಮಾಡಲಿಲ್ಲ. ಏಕೆಂದರೆ ಅವರದು ಒಡೆದು ಆಳುವ ನೀತಿಯಾಗಿತ್ತು. 
ಭಾರತದಂತಹ ವಿಶಾಲ ರಾಷ್ಟ್ರದಲ್ಲಿ ಬದಲಾವಣೆ ತರಬೇಕೆಂದರೆ, ದೀರ್ಘಕಾಲಿಕ ಯೋಜನೆಗಳಿಂದ ಮಾತ್ರ ಸಾದ್ಯವಾಗುತ್ತದೆ. ಇದೇ ನಿಟ್ಟಿನಲ್ಲ ಸಮಾಜದಲ್ಲಿ ಸಮಾನತೆ ಸಾಧಿಸುವ ಪ್ರಾಥಮಿಕ ಉದ್ದೇಶದಿಂದ ಮಿಸಲಾತಿ ಪದ್ದತಿಯನ್ನು ಭಾರತ ಅಳವಡಿಸಿಕೊಂಡಿತು. ಮೀಸಲಾತಿ ಸಮಾನತೆ ಕಾಯ್ದುಕೊಳ್ಳಲು ಇರುವ ತಾತ್ಕಾಲಿಕ ಶಾರ್ಟಕಟ್ ಎಂದರೂ ತಪ್ಪಾಗಲಾರದು. 1882ರ ಹಂಟರ್ ಆಯೋಗವು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಉದ್ದೇಶದ ಜೊತೆಗೆ ಸರ್ಕಾರಿ ಹುದ್ಧೆಗಳಲ್ಲಿ ಸ್ಥಳಿಯರ ಮೀಸಲಾತಿಯ ಅಂಶವನ್ನೂ ಒಳಗೊಂಡಿತ್ತು. 19012ರಲ್ಲಿ ಕೊಲ್ಲಾಪುರದ (ಮಹಾರಾಷ್ಟ್ರ)ಛತ್ರಪತಿ ಶಾವು ಮಹಾರಾಜನು ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳಿಗೆ 50% ಮೀಸಲಾತಿ ನೀಡಬೇಕೇಂದು ಘೋಷಿಸಿದನು.  ಇದು ಮೀಸಲಾತಿಗೆ ಸಂಬಂಧಪಟ್ಟ ಮೊಟ್ಟಮೊದಲ ಅಧಿಕೃತ ಘೋಷಣೆಯಾಗಿದೆ. ಅಂದಿನಿಂದ ಇಂದಿನವರೆಗೂ ಭಾರತದ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆ ಒಂದು ವಿವಾದಾಂಶವಾಗಿಯೇ ಉಳಿದಿದೆ.
ಇಂದಿನ ಭಾರತದ ರಾಜಕೀಯ ವ್ಯವಸ್ಥೆಯ ಶುದ್ಧತೆ ಮತ್ತು ಶಾಂತಿಯನ್ನು ಕಾಯ್ದುಕೊಳ್ಳಲು ಕೆಲವು ವಿವಾದಗಳಿಂದ ಪ್ರಜೆಗಳು ದೂರವಿದ್ದಾರೆ ಅಥವಾ ದೂರವಿರಸಲ್ಪಟ್ಟಿದ್ದಾರೆ. ಅಂತಹ ವಿವಾದಾಂಶಗಳಲ್ಲಿ ಜಾತಿಆಧಾರಿತ ಮೀಸಲಾತಿ ವ್ಯವಸ್ಥೆಯೂ ಒಂದು. ಸಮಾನತೆ ಮತ್ತು ಅಭಿವೃದ್ಧಿಗೆ ಬೇಕಾದ ಅವಕಾಶಗಳನ್ನು ಸೃಷ್ಟಿಸದೇ ಕೇವಲ ಒಂದು ಜಾತಿಯಲ್ಲಿ ಹುಟ್ಟಿದ ಆಧಾರವಾಗಿಟ್ಟುಕೊಂಡು ಯಾರದ್ದೋ ಅವಕಾಶವನ್ನು ಕಸಿದು ಇನ್ನೊಬ್ಬರ ಕೈಗಿಡುವ ವ್ಯವಸ್ಥೆ ಇದಾಗಿದೆ. ಸಮಾಜದ ಬಿರುಕಿಗೂ ಪೋಷಣೆ ಕೊಡುತ್ತಿದೆ. ಪ್ರತಿಭಾವಂತರ ನಿರಶೆಗೂ ಕಾರಣವಾಗಿದೆ. ರಾಜಕಾರಣಿಗಳ ಓಟ್‍ಬ್ಯಾಂಕ್ ತುಂಬಲೂ ಸಹಕಾರಿಯಾಗಿದೆ. ದಲಿತರ ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಯ ಕನಸನ್ನು ಹೊತ್ತು ಜನಿಸಿದ ದಲಿತ ಸಂಘರ್ಷ ಸಮಿತಿಯಂತಹ ಸಂಘಟನೆಗಳು, ಸಂಘಟನೆಯ ಮೂಲ ಆಶೋತ್ತರಗಳನ್ನು ಕೈಬಿಟ್ಟು ರಾಜಕಾರಣಿಗಳ ಮೀಸಲಾತಿಯ ಹೊಡೆತಕ್ಕೆ ಸಿಕ್ಕು ತುಂಡುಗಳಾಗಿ ಕೇವಲ ಮೀಸಲಾತಿಗಾಗಿ ತಮ್ಮ ಹೋರಾಟವನ್ನು ಸೀಮಿತಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆದ್ದರಿಂದ ಜಾತಿ ಆಧಾರಿತ ಮೀಸಲಾತಿ ಇಂದಿನ ಸಮಾಜಕ್ಕೆ ನಿರುಪಯುಕ್ತ ಎಂದು ಗೋಚರಿಸುತ್ತದೆ. 
ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 15%, ಪರಿಶಿಷ್ಟ ಪಂಗಡಕ್ಕೆ 8% ಮತ್ತು ಇತರೆ ಹಿಂದುಳಿ ವರ್ಗಗಳಿಗೆ 27% (ಒಟ್ಟು 50%)ಮೀಸಲಾತಿ ಜಾರಿಯಲ್ಲಿದ್ದು, ಹಿಂದುಳಿದ ವರ್ಗಗಳಿಗೆ ಕೆನೆ ಪದರ ನೀತಿ ಅಳವಡಿಸಲಾಗಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 6ಲಕ್ಷಕ್ಕಿಂತ ಮೇಲ್ಪಟ್ಟಿದ್ದರೆ ಮೀಸಲಾತಿ ಅನ್ವಯಿಸುವುದಿಲ್ಲ, ಆದರೆ ಈ ನೀತಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಅನ್ವಯಿಸುವುದಿಲ್ಲ. ಇದು ಪುನಃ ಬೇಧವನ್ನು ಕಲ್ಪಿಸುತ್ತದೆ ಹೊರತು ಬೇರೆ ಏನನ್ನೂ ಸಾಧಿಸುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಷ್ಟ್ರೀಯ ಆಯೋಗದ ಒಂದು ಅಧ್ಯಯನದ ಪ್ರಕಾರ 1965ರಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಪೈಕಿ (ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಬಿಟ್ಟು) 1% ಪ್ರಥಮ ಶ್ರೇಣಿಯ (ಕ್ಲಾಸ್ 1) ಹುದ್ದೆಗಳಿದ್ದರು. 1995ರಲ್ಲಿ ಈ ಸಂಖ್ಯೆ 10% ಏರಿತ್ತು. 2015ರಲ್ಲಿ ಈ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯೇ ಹೆಚ್ಚು. ಅದೇ ರೀತಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳೂ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದಾರೆ. ಈ ಅಂಕಿ ಅಂಶಗಳು ಮೀಸಲಾತಿ ಪದ್ದತಿಯ ಯಶಸ್ವೀ ಅನುಷ್ಟಾನವನ್ನು ಸೂಚಿಸುತ್ತವೆ ಆದರೆ ನಿಜವಾದ ಅಂಶವೆಂದರೆ ಈ ಉನ್ನತ ದರ್ಜೆಯ ಅಧಿಕಾರಿಗಳ ಮಕ್ಕಳೂ ಸಹ ಮೀಸಲಾತಿಯ ಫಲಾನುಭವಿಗಳಾಗಿರುವುದು. ಇದು ಕೆನೆ ಪದರದ ಕೆನೆಯನ್ನು ದಪ್ಪಗೊಳಿಸುತ್ತಿದೆ ಹೊರತು ಆರ್ಥಿಕವಾಗಿ ಹಿಂದುಳಿದವರ ಅವಕಾಶಗಳನ್ನು ಹಾಲಿಲ್ಲದ ಕೂಸಿನಂತೆ ಅಪೌಷ್ಠಿಕಗೊಳಿಸುತ್ತಿದೆ. 
ಸದ್ಯದ ಸಮಾಜದ ಸ್ಥಿತಿಯಲ್ಲಿ ಕೇವಲ ಜಾತಿ ಆಧಾರದ ಮೇಲಿನ ಮೀಸಲಾತಿಯನ್ನು ಅಳಿಸಿ  ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿ ಪದ್ದತಿ ಅನುಷ್ಠಾನವಾಗಬೇಕಿದೆ. ಕೆಲವರ ವಾದವೆಂದರೆ ಈ ಮೀಸಲಾತಿ ಕೇವಲ ಆರ್ಥಿಕವಾಗಿ ಮುಂದುವರೆಯಲು ಮಾತ್ರವಲ್ಲ ಕೆಲವು ಜಾತಿಗಳ ಸಾಮಾಜಿಕ ಸ್ಥಿತಿಯ ಅಭಿವೃದ್ಧಿಗೂ ಮೀಸಲಾತಿ ಬೇಕು ಎಂಬುದಾಗಿದೆ. ಆದರೆ ವಾಸ್ತ್ತವ ಪರಿಹಾರ ಜಾತಿಪದ್ದತಿಯ ನಿರ್ಮೂಲನೆ ಯಾಕಾಗಬಾರದು?


    (ವಿಜಯ ಕರ್ನಾಟಕ (ಗಂಗಾವತಿ) ನಮ್ಮ ಬಳ್ಳಾರಿ ಪುಟ ಸಂಖ್ಯೆ 4 ದಿನಾಂಕ: 16 ನವೆಂಬರ್ 2015.)

@ ಗೌತಮ್ ಪಿ ರಾಠಿ,  ಬಳ್ಳಾರಿ.  ಮೊ:8553111700  e-mail: gouthamrati@gmail.com

No comments:

Post a Comment

Thank You and have a great time